
ಸೋಮವಾರ
03-08-2020
ಸುದ್ದಿ: ನಾಡು ಮಾಹಿತಿ
ಬೆಂಗಳೂರು : ಕೊರೋನಾ ಸೋಂಕಿನ ಭೀತಿಯಿಂದಾಗಿ ಈಗಾಗಲೇ ಜುಲೈ 31, 2020ರವರೆಗೆ ಶಾಲೆಗಳನ್ನು ತೆರೆಯದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ಆಗಸ್ಟ್ 31, 2020ರವರೆಗೆ ರಾಜ್ಯಾದ್ಯಂತ ಶಾಲೆಗಳನ್ನು ತೆರೆಯದಂತೆ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮುಖ್ಯ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವುದು ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ದಿನಾಂಕ 31-07-2020ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಿರುವಂತೆ ಆದೇಶಿಸಲಾಗಿತ್ತು.
ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲಾ ಶಾಲೆಗಳು, ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ದಿನಾಂಕ 31-08-2020ರವರೆಗೆ ಮುಚ್ಚುವಂತೆ ಆದೇಶಿಸಿರುವ ಹಿನ್ನಲೆಯಲ್ಲಿ, ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ದಿನಾಂಕ 31-08-2020ರವರೆಗೆ ಮುಚ್ಚಿರತಕ್ಕದ್ದು ಎಂಬುದಾಗಿ ಆದೇಶಿಸಿದ್ದಾರೆ.
ಹೀಗಾಗಿ ಆಗಸ್ಟ್ 31, 2020ರವರೆಗೆ ರಾಜ್ಯಾಧ್ಯಂತ ಶಾಲೆಗಳು ಬಂದ್ ಆಗಿರಲಿವೆ.
– ವಸಂತ ಬಿ ಈಶ್ವರಗೆರೆ
